Friday, September 19, 2008

ಏಕೆ ಹೀಗೆ ನಮ್ಮ ನಡುವೆ ?

ಜೀವನದಲ್ಲಿ ಕೆಲವೊಂದು ಘಟನೆಗಳು [ನಾವು ಭಾಗವಹಿಸದಿದ್ದರೂ ಸಾಕ್ಷಿಯಾದ ಘಟನೆಗಳು ] ನಮ್ಮ ಮನಸ್ಸಿನಲ್ಲಿ ಉಳಿಯದೆ ಮರೆಯಾಗಿಬಿಡುತ್ತವೆ. ಇನ್ನೋದಿಷ್ಟು ಘಟನೆಗಳು ನಮ್ಮನ್ನು ಕಾಡಿದರೂ ನಮ್ಮಿಂದ ಪ್ರಯತ್ನಪೂರ್ವಕವಾಗಿ ಹೊರಹಾಕಲ್ಪಡುತ್ತವೆ. ಇನ್ನೊಂದಿಷ್ಟು ನಮ್ಮನ್ನೇ ಕಾಡಿ, ಮನಸ್ಸನ್ನು ಚಿಂತನೆಗೆ ಹಚ್ಚಿಸಿ, ಕೆಲವೊಮ್ಮೆ ಪ್ರಚೋದಿಸಿ ಶಾಶ್ವತವಾಗಿ ಉಳಿದು ಬಿಡುತ್ತವೆ. ಲೇಖನವನ್ನ ಬರೆಯಲು ಪ್ರಚೋದಿಸಿದ್ದು ಅಂತ ಒಂದು ಘಟನೆ. ಘಟನೆಗೆ ಮೊದಲು ನಾನು ಸಹ ತುಂಬ ಜನ ಯೋಚಿಸುವಂತೆ ಇದ್ದೆ. ಆದರೆ ಘಟನೆ ಘಟಿಸಿದ ಮೇಲೆ ನನ್ನ ಯೋಚನಾ ಲಹರಿಯ ದಿಕ್ಕನ್ನ ಬದಲಿಸಿಕೊಂಡೆ. ಹಾಗಾದರೆ ನಡೆದ ಘಟನೆ ಏನು ಅನ್ನೋ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಬಂದಿರೋದು ಸಹಜ. ಈಗ ಘಟನೆಯ ಬಗ್ಗೆ ಬರೋಣ. ಕೆಲವು ದಿನಗಳ ಕೆಳಗೆ ನಾನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ನನ್ನ ಹಿಂದಿನ ಅಂಕಣದಲ್ಲಿ ಒಬ್ಬ ವ್ಯಕ್ತಿ ಅವ್ಯಾಚ ಶಬ್ದಗಳಿಂದ ಯಾರನ್ನೋ ಬಯ್ಯುತ್ತಿರೋದು ಕೇಳಿಸಿತು. ಯಾರೋ ಕುಡಿದು tight ಆಗಿ ಬಾಯಿಯನ್ನು loose ಮಾಡಿಕೊಂಡಿದಾನೆ ಅಂತ ಸುಮ್ಮನಾದೆ. ಆದರೆ ಬರ್ತಾ ಬರ್ತಾ ಧ್ವನಿ ಜೋರಾಗತೊಡಗಿ ಆಸಕ್ತಿ ಇಲ್ಲದಿದ್ದರೂ ಕಡೆ ತಿರುಗುವಂತಾಯಿತು. ಆವೇಳೆಗಾಗಲೇ ವ್ಯಕ್ತಿಯ ಬಯ್ಗುಳದಿಂದ ಬೇಸತ್ತ ಜನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ನನಗೆ ಸ್ಪಷ್ಟವಾಗಿತ್ತು. ಆಗ ನನಗೆ ಗೊತ್ತಾದ ವಿಚಾರವೆಂದರೆ ವ್ಯಕ್ತಿ ಕುಡಿದಿರಲಿಲ್ಲ. ಮತ್ಯಾಕೆ ಹೀಗೆ ಎಂದು ಆಲೋಚಿಸುವ ಹೊತ್ತಿಗಾಗಲೇ ಅಲ್ಲಿರುವ ಹಲವರು ವ್ಯಕ್ತಿಯ ವರ್ತನೆಯಿಂದ ಬೇಸತ್ತು ಅವನನ್ನು ಹೊಡೆಯಲು ಹೋದರು. ಒಂದೆರಡು ಕ್ಷಣ ಅವರ ಕೈಗೆ ಸಿಗದಿದ್ದರೂ ನೂರಾರು ಜನ ಇದ್ದ ಸ್ಥಳವಾಗಿದ್ದರಿಂದ ಅವರಿಗೆ ಸಿಕ್ಕಿದ್ದಾಯಿತು. ಆಲ್ಲಿಂದ ಒಂದು ಹಿಂಸಾತ್ಮಕ ಘಟನೆಗೆ ಮೂಕ ಸಾಕ್ಷಿಯಾಗಿದ್ದೆ. ಸಾರ್ವಜನಿಕರಿಗೆ ಸಿಕ್ಕ ವ್ಯಕ್ತಿ ಅಸಹಾಯಕನಾಗಿದ್ದ. ಹೀಗೆ ಹತ್ತಾರು ಜನ ಒಮ್ಮೆಲೇ ದಾಳಿ ಮಾಡಿ ಬಟ್ಟೆ ಹರಿದು, ಮನಬಂದಂತೆ ಹೊಡೆದು ಅಲ್ಲಿಂದ ಓಡಿಸಿದ್ದು ನನ್ನ ಮನಸ್ಸಿನಲ್ಲಿ ಅಚ್ಚಾಗಿ ಚುಚ್ಚುತ್ತಿದೆ.

ಒಬ್ಬ ವ್ಯಕ್ತಿ ಎಂದು ಹೇಳಿದ್ದರ ಹಿಂದೆ ಉದ್ದೇಶವೇನೆಂದರೆ ಆ ವ್ಯಕ್ತಿ ನಮ್ಮ ನಿಮ್ಮಂತೆ ಕೈ ಕಾಲುಗಳನ್ನು ಹೊಂದಿದ್ದು, ಸಾಮಾನ್ಯ ಜೀವನವನ್ನು ನಡೆಸುತ್ತಿದ್ದರು, ನಾವು ಅವನನ್ನು/ಅವರನ್ನು ಭಿನ್ನವಾದ ವರ್ಗಕ್ಕೆ ಸೇರಿಸಿದ್ದೇವೆ. ಕೇವಲ ಲಿಂಗ ಸಂಭಂಧಿ ವೈಕಲ್ಯದಿಂದಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರಗಿತ್ತಂತಹ ಒಂದು ವರ್ಗ ಅದೇ ಹಿಜಡಾ / Transgender .

ಮೊದಲಿನಿಂದಲೂ ನಮ್ಮ ಸಮಾಜದಲ್ಲಿ ಹಿಜಡಾಗಳ ಬಗ್ಗೆ ಒಂದು ರೀತಿಯಾದ ಅಸಹ್ಯ ಭಾವನೆಯಿದೆ. ಹಾಗಾಗಿ ಅವರನ್ನು treat ಮಾಡುವ ರೀತಿಯೇ ಬೇರೆಯಾಗಿದೆ. ಹಿಜಡಾಗಳು ಬೇರೆ ಯಾವುದೋ ಗ್ರಹದಿಂದ ಬಂದಂತಹ, ಸಮಾಜ ಕಂಟಕ ಶಕ್ತಿಗಳು ಎಂಭ ಭಾವನೆ ನಮ್ಮಲ್ಲಿ ಆಳವಾಗಿ ಬೇರೂರಿದೆ. ಇದಕ್ಕೆ ಮುಖ್ಯ ಕಾರಣ ಅವರ ವರ್ತನೆ ಹಾಗು ವೃತ್ತಿ. ಭಿಕ್ಷೆ ಬೇಡುವುದು ಮತ್ತು ವೇಶ್ಯಾವಾಟಿಕೆ ಇವರ ಮುಖ್ಯವಾದ ವೃತ್ತಿ. ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಅವ್ಯಾಚ ಶಬ್ದಗಳಿಂದ ಜರಿಯುವ, ಕೈಸನ್ನೆಗಳನ್ನು ಮಾಡುವಂತಹ ವರ್ತನೆಗಳು ಅವರ ಬಗ್ಗೆ ಅಸಹ್ಯ ಭಾವನೆ ಮೂಡಿಸಿವೆ.

ಹಾಗಾದರೆ ಅವರ ಈ ವರ್ತನೆಗಳಿಗೆ ಕಾರಣವೇನು ? ಮುಖ್ಯವಾಹಿನಿಯಲ್ಲಿ ಇರುವ, ನಾಗರೀಕರೆನಿಸಿ ಕೊಂಡ, ವಿದ್ಯವಂತರದ ನಾವು ಅವರ ಇಂತಹ ವರ್ತನೆಗೆ ಕಾರಣವನ್ನು ಎಂದಾದರೂ ಯೋಚಿಸಿದ್ದೇವೆಯೇ. ಒಬ್ಬ ಅಸಹಾಯಕ ಹಿಜಡನನ್ನು ನೂರಾರು ಜನ ನಿರ್ದಯದಿಂದ ಹೊಡೆಯುವುದು ಸರಿಯೇ? ಅವರ ಭಿಕ್ಷಾಟನೆ, ವೇಶ್ಯಾವೃತ್ತಿ ಎಲ್ಲವೂ ತಪ್ಪು. ಆದರೆ ಅವರು ಭಿನಾಲಿನ್ಗಿಯಾಗಿ ಹುಟ್ಟಿದ್ದು / ಮಾರ್ಪಾಡಾಗಿದ್ದು ಅವರ ತಪ್ಪೇ? ಇವರ ಇಂತಹ ವರ್ತನೆಗಳಿಗೆ ಕಾರಣವನ್ನು ಹುಡುಕ ಹೊರಟರೆ ಮೊದಲಿಗೆ ಎದುರಾಗೋದು ಈ ಕೆಳಗಿನವು.
೧) ಸರ್ಕಾರದಿಂದ ಅವರಿಗೆ ಯಾವ ಸವಲತ್ತುಗಳು ಇಲ್ಲ.
೨) ರೇಶನ್ ಕಾರ್ಡ್ ಇಲ್ಲ, ಮತದಾನದ ಹಕ್ಕು ಇಲ್ಲ.
೩) ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲದರಲ್ಲೂ ತಾರತಮ್ಯ.
೪) ಸಾರ್ವಜನಿಕರಿಂದ ನಿಂದನೆಗೆ, ಅಪಹಾಸ್ಯಕ್ಕೆ ಒಳಗಾಗುವಿಕೆ.
೫) ತಮ್ಮ ಮನೆಯವರಿಂದಲೇ ಅವಜ್ಞೆ.

ಮನುಷ್ಯನಿಗೆ ಬೇಕಾದ ಮೂಲ ಸವಲತ್ತುಗಳಾದ ಆಹಾರ, ಆಶ್ರಯ, ಉಡುಪು ಇವುಗಳಿಗೊಸ್ಕರ ಪ್ರತಿನಿತ್ಯ / ಪ್ರತಿಕ್ಷಣ ಹೋರಾಡಬೇಕಾದಂತಹ ಪರಿಸ್ಥಿತಿ ಅವರುಗಳಿಗೆ. Basic need ಗಳಿಗೆ ಹೋರಾಡುವಂತಹ ಅವರ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆಯೇ? ಹಾಗಂತ ಅವರ ಭಿಕ್ಷಾಟನೆ, ವೇಶ್ಯಾವೃತ್ತಿಯನ್ನು ಬೆಂಬಲಿಸುತ್ತಿದ್ದೇನೆ ಎಂಬ ಅರ್ಥ ಅಲ್ಲ. ನಾನು ಅವೆಲ್ಲದರ ವಿರುದ್ಧ ಇದ್ದೇನೆ. ಈಗ ನಾನು ಹೇಳಲು ಹೊರಟಿರುವುದು ಅವರನ್ನು ನಾವ್ಯಾಕೆ ಅನುಕಂಪದಿಂದ, ಮಾನವೀಯತೆಯಿಂದ ನೋಡಬಾರದು. ಅವರಿಗೂ ನಮ್ಮಂತೆ ಮಸ್ಸಿರೋದಿಲ್ಲವೇ? ಅವರ ಭಾವನೆಗಳೇನು ಬರಡಾಗಿವೆಯೇ? ನೀವೇ ಯೋಚಿಸಿ.